>> Friday, April 16, 2010

ವಸ್ತು ಏನು? ಬದುಕ ಕಾವ್ಯಕೆ
ಗುಲಾಬಿ ಹೂ ಮೇಡಂಗೆ
ಕೊಟ್ಟು ಖುಷಿ ಪಡುವ ಮಗಳು
"ನಮ್ಮ ಮೇಡಂ
ಥ್ಯಾಂಕ್ಸ ಹೇಳಿ ಮುಡಿದುಕೊಳ್ಳುತ್ತಾರೆ"
ಎಂದಾಗ ಅನಿಸಿತು. ಅರೆ ಇಲ್ಲಿ ಇನ್ನೂ
ಥ್ಯಾಂಕ್ಸ ಹೇಳುವವರು ಇದ್ದಾರೆಯೇ?
ಕರಣಗಳ ಭರಾಟೆಯಲಿ ಸದ್ದಿಲ್ಲದೆ
ಸಾವಾದ ರೈತರು ಮಾಧ್ಯಮಗಳ
ದೊಡ್ಡ ಸುದ್ದಿಯಾಗುತ್ತಾರೆ
ಮೋಡಗಳಿಗೆ ಮುತ್ತಿಕ್ಕಿ ಮಳೆಸುರಿಸುವ
ವಿಮಾನಗಳ ಭರಾಟೆಯಲಿ ಕರಗಿ ಹರಡಿದೆ
ಬರಗಾಲ
ಅಪಘಾತಗಳಲ್ಲಿ ಸ್ವಲ್ಪದರಲೆ ಪಾರಾಗುವ-
ನ್ಯಾಯಾಲಯದಲಿ,
ನಿರ್ದೋಷಿಗಳು ಎಂದು ಸಾಬೀತಾಗುವವರು
ನಿತ್ಯ ಪತ್ರಿಕೆಗಳಿಗೆ ಹಲ್ಕಿರಿಯುತ್ತಾರೆ
ಯಾರಿಗೂ ಥ್ಯಾಂಕ್ಸ ಹೇಳದೆ!
ಮಾತುಗಳು ಮೌನ ಪಡೆದ ಹೊತ್ತು
ಕೆರೆಗಳು ಬಾಯಿ ತೆರೆದ ನೀರಿಗಾಗಿ
ಹಾಹಾಕರಿಸಿದ ಹೊತ್ತು ಯಾರು
ಯಮದಾಹ ತೀರಿಸಿಯಾರು?
ಗೇಯತೆ ಕಾವ್ಯ ವಾಚ್ಯತೆ ಅಲಗಿಗೆ
ನಲುಗಿದಾಗ ವಿಮರ್ಶಕರು ಕೇಕೆ ಹಾಕಿ
ವಿಷಯವನರಸದೆ ನಂಜಸುರಿಸುವಾಗ
ಕಾವ್ಯಕ್ಕೆ ವಸ್ತು ಏನು ಎಂದು ಸಾಗಿದೆ
ಚರ್ಚೆ. ಮುಖ ಗಂಟಿಕ್ಕಿದರೂ ಸುರಿಯದ
ಮೋಡದ ಹಾಗೆ
ಕರಗದ ಹೃದಯಗಳ ಹಾಗೆ.

0 comments: